12 June 2007

ಆಲೋಚನೆ

ನನ್ನ ಅಪ್ಪ ಸತ್ಯ ಬಿಟ್ಟು ಬೇರೆ ಏನೂ ಹೇಳುತ್ತಿರಲಿಲ್ಲ.
ನನ್ನ ಅಗ್ರಜನಿಗೆ ಸುಳ್ಳು ಹೇಳುವುದು ಕರತಲಾಮಲಕ.
ನನ್ನ ತೊಂದರೆ ಎನೆಂದರೆ, ನನಗೆ ಸುಳ್ಳು ಮತ್ತು ಸತ್ಯದ ಮಧ್ಯೆ ವ್ಯತ್ಯಾಸ ಗೊತ್ತಿಲ್ಲ !

ನನ್ನತನ ಎನ್ನುವುದು ನಾನು,ನಾನಾಗಿ ಇರುವುದರಲ್ಲಿ ಇದೆ.
ಇನ್ನೊಬ್ಬರನ್ನು ಅನುಕರಿಸುವುದರಲ್ಲಿ ಅಲ್ಲ.

ಒಬ್ಬ ಕಳ್ಳ ಕದ್ದ ಸಾಮಾನು ತೆಗೆದುಕೊಂಡು ಓಡಿ ಹೋಗುವಾಗ ಅಚಾನಕ್ ಆಗಿ ಪ್ರಾಣ ಬಿಟ್ಟ.
ಅದೇ ದಿನ ಒಬ್ಬ ಕೋಟ್ಯಾಧಿಪತಿಯೂ ತನ್ನ ಕೊನೆಯ ಉಸಿರೆಳೆದ.ವರುಷಗಳಿಂದ ಕೂಡಿಟ್ಟದ್ದ ಆಸ್ತಿಯನ್ನು ತನ್ನ ಜೊತೆ ಒಯ್ಯಲು ಪ್ರಯತ್ನಿಸಿದ. ಆದರೆ ಲಗೇಜ ಚಾರ್ಜ ಬಹಳವಾದ ಕಾರಣ ಎಲ್ಲಾ ಇಲ್ಲೇ ಬಿಟ್ಟು ಹೋದ.
ಇಬ್ಬರೂ ಕಳ್ಳರೇ.
ಒಬ್ಬ ಸಮಾಜಕ್ಕೆ ವರ್ಜ್ಯ, ಇನ್ನೊಬ್ಬ ಸಮಾಜಕ್ಕೆ ಸಹ್ಯ.
ಆಸ್ತಿ ಎನ್ನುವುದು ಇನ್ನೊಬ್ಬರಿಂದ ಕದಿಯುವುದೇ.
ನಾವು ಇನ್ನೊಬ್ಬರಿಗೆ ಅನಾಮತ್ತಾಗಿ ಬಿಟ್ಟು ಹೋಗುವ ಲಗೇಜು ಅದು.

ಹಾಗೇ ಕಿವಿಯ ಮೇಲೆ ಬಿದ್ದಿದ್ದು :
'ಆತ ಮಾತನಾಡಲು ಬಾಯಿ ತೆಗೆದೊಡನೆ ಆತನ ಅಗಾಧ ಮೂರ್ಖತ್ವದ ಪರಿಚಯವಾಗುವುದು.'

"ಪಾಪಿ ಸಮುದ್ರಕ್ಕೆ ಹೋದಲ್ಲಿ ಮೊಣಕಾಲು ನೀರು."
ಇದನ್ನು ಯತಾವತ್ತಾಗಿ ಇಂಗ್ಲಿಷಿಗೆ ತುರ್ಜುಮೆ ಮಾಡಿದರೆ ಸಿಗುವುದು-
Sinner Sea goes , Kneeful water.

"ಕಿಡಕಿ ತೆಗೆ. ಗಾಳಿ ಜೋರಾಗಿ ಬರಲಿ "
Open windows. let the air force come in.

ಕಾಮ ಎನ್ನುವುದು ಕುತೂಹಲವಾಗಿರುವಾಗಿನ ಸೌಂದರ್ಯ ಅನುಭವವಾಗಿ ಪರಿವರ್ತನೆಯಾದ ನಂತರ ಇರುವುದಿಲ್ಲ. ಆಗ ಅಲ್ಲಿರುವುದು ಆಸೆ, ತವಕ , ತುಡಿತ. ಬಾಲ್ಯದ ಮುಗ್ಧತೆ ಕಳೆದುಕೊಂಡು ಪ್ರೌಡಾವಸ್ಥೆಗೆ ಕಾಲಿಟ್ಟ ಮನುಜನಂತೆ.

1 comment: